ದಸರಾ ರಜೆ ವಿಸ್ತರಣೆ ನಾಳೆಯ ವಿಶೇಷ ತರಗತಿಯಲ್ಲಿ ಕಳೆದು ಹೋದೀತೆ

Halli News team
0

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆಯನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ರಜಾ ಅವಧಿಯನ್ನು ವಿಸ್ತರಿಸಿದ ಬಗ್ಗೆ ಎಲ್ಲಾ ಕಡೆ ಸುದ್ದಿ ಹರಿದಾಡುತ್ತಿದೆ. ಇದರಿಂದ ಶಿಕ್ಷಕರು, ಪಾಲಕರು ಗೊಂದಲಕ್ಕೀಡಾಗಿದ್ದಾರೆ, ಇದರ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ.

teacher feels stressed in a visit

ಮುಖ್ಯಮಂತ್ರಿ ಅವರು ದಿನಾಂಕ: 07-10-2025ರಂದು ತಮ್ಮ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇವರು ಮುಖ್ಯಮಂತ್ರಿಗಳಿಗೆ ಇದೇ ತಿಂಗಳ 6ನೇ ತಾರೀಕು ಮನವಿಯನ್ನ ನೀಡಿದ್ದರು. ಇದರ ಪ್ರಯುಕ್ತ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಟಿಪ್ಪಣಿಯಲ್ಲಿ ನಮೂದಿಸಿ ಸದರಿ ಮನವಿ ಕುರಿತು ಮಾನ್ಯ ಮುಖ್ಯಮಂತ್ರಿಗಳು ನೀಡುವ ಸೂಚನೆಯಂತೆ ಕ್ರಮವಹಿಸಿ ಎಂದು, ಸಂಘದವರಿಗೆ ತಿಳಿಸಿದ ಪ್ರಯುಕ್ತ ಇಂದು ಪತ್ರಿಕಾಗೋಷ್ಠಿಯಲ್ಲಿ ಸಧ್ಯ ಡ್ರಾಯವರ್‌ನ ಸ್ಥಾನದಲ್ಲಿರುವ ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ಮಾತನಾಡುತ್ತಾ, ನಡೆಯುತ್ತಿರುವ ಸಮೀಕ್ಷೆಯ ಕಾರ್ಯವನ್ನು ಪೂರ್ಣಗೊಳಿಸುವ ಸಲುವಾಗಿ ಹೆಚ್ಚಿನ ಕಾಲಾವಕಾಶದ ಅಗತ್ಯವಿದ್ದುದರಿಂದ ಶಾಲೆಗಳಿಗೆ ಹೆಚ್ಚುವರಿ ದಸರಾ ರಜೆಗಳನ್ನು ನೀಡಿ ಸಮೀಕ್ಷೆಯನ್ನು ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರು ನಗರ ಮತ್ತು ರಾಜ್ಯದ ಇತರೆ ಎಲ್ಲಾ ಜಿಲ್ಲೆಗಳಲ್ಲಿ ನಡೆಯುತ್ತಿರುವ ಸಮೀಕ್ಷೆ ಕಾರ್ಯವನ್ನು ಶಿಕ್ಷಕರು ಪೂರ್ಣಗೊಳಿಸುವುದಕ್ಕೆ ರಾಜ್ಯದ ರಾಜ್ಯ ಪಠ್ಯಕ್ರಮ ಅನುಸರಿಸುವ ಸರಕಾರಿ ಮತ್ತು ಅನುದಾನಿತ ಶಾಲೆಗಳ ದಸರಾ ರಾಜಾವಧಿಯನ್ನ ದಿನಾಂಕ 18-10-2025 ರವರೆಗೆ ವಿಸ್ತರಿಸಲಾಗಿದೆ ಎಂದರು. ಶಿಕ್ಷಕರು ಸಮೀಕ್ಷೆ ಕಾರ್ಯಕ್ರಮವನ್ನು 19-10-2025ಕ್ಕೇ ಮುಗಿಸಬೇಕೆಂದು ತಿಳಿಸಿದ್ದಾರೆ.

ಮತ್ತೊಂದು ಅಚ್ಛರಿಯ ವಿಷಯವೇನೆಂದರೆ, ರಜೆ ನೀಡುವುದರಿಂದಾದ ಮಕ್ಕಳ ಕಲಿಕಾ ಕೊರತೆಯ ಅವಧಿಯನ್ನು, ರಜಾ ದಿನಗಳ ನಂತರದಲ್ಲಿ ವಿಶೇಷ ತರಗತಿಗಳನ್ನು ನಡೆಸುವ ಮೂಲಕ ಸರಿದೂಗಿಸುವುದಾಗಿ ಸಂಘದವರು ತಿಳಿಸಿದ್ದಾರೆ. ಆ ವಿಶೇಷ ತರಗತಿ ನಡೆಸುವವರು ನಿಷ್ಟೆಯಿಂದ ಸಮೀಕ್ಷೆಯಲ್ಲಿ ನಿರತ ಬಡಪಾಯಿ ಶಿಕ್ಷಕರೇ ಅಲ್ಲವೇ?  ಬೋಧಿಸುವ ಹಿತ-ಅಹಿತ ಅರಿಯದ ಸಂಘ ಹೆಚ್ಚುವರಿ ತರಗತಿ ನಡೆಸುವ ಬಗ್ಗೆ ಹೇಗೆ ಮಾತು ಕೊಟ್ಟಿತು? ಸಮೀಕ್ಷೆಯಲ್ಲಿ ನಿರತ ಶಿಕ್ಷಕರನ್ನು ವಿಚಾರಿಸದೇ ನಾಳೆ ವಿಶೇಷ ತರಗತಿಯನ್ನು ನಡೆಸುತ್ತೇವೆ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ. ಗಣತಿ ಕಾರ್ಯ ಆಗಬೇಕಿರುವುದು ಸರಕಾರಕ್ಕೋ ಶಿಕ್ಷಕರಿಗೋ, ಸರಕಾರಕ್ಕೇ ಎಂತಾದರೆ ಅದಕ್ಕಾಗಿ ಪೂರಕ ವ್ಯವಸ್ಥೆ ಮಾಡಬಹುದಾಗಿತ್ತು. ಹಾಗಾಗಿ ವಿಶೇಷ ತರಗತಿ ನಡೆಸುವ ಭರವಸೆ ಕೊಟ್ಟಮೇಲೆ ರಜಾ ಅವಧಿಯನ್ನ ವಿಸ್ತರಿಸಲು ತಾವೂ ಸೈ ಎಂದು ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ಆಯುಕ್ತರಾದ ಸುರಲ್ಕರ್ ವಿಕಾಸ್ ಕಿಶೋರ್ ಸಾಹೇಬರು ಅವರು ಆದೇಶವನ್ನು ಹೊರಡಿಸಿರುತ್ತಾರೆ.

 ಆದರೆ 12-10-2025 ರಿಂದ ನಡೆಯಲಿರುವ ದ್ವಿತೀಯ ಪಿಯುಸಿ ಮಧ್ಯಾವಧಿ ಪರೀಕ್ಷೆಯ ಸಂಬಂಧ ದ್ವಿತೀಯ ಪಿಯುಸಿ ಉಪನ್ಯಾಸಕರನ್ನು ಸಮೀಕ್ಷೆ ಕಾರ್ಯದಿಂದ ಬಿಡುಗಡೆಗೊಳಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮತ್ತು ಸರಕಾರದ ಮಾನಮರ್ಯಾದೆ ವಿಷಯ ಇನ್ನೊಂದಿದೆ, ಇನ್ನು ಮುಂದುವರೆದು ಹೇಳಬೇಕೆಂದರೆ ಸಮೀಕ್ಷಾ ಕಾರ್ಯದಲ್ಲಿರುವವರು ಸರಿಸುಮಾರು ಒಂದು ತಿಂಗಳ ಕಾಲ ಸಮೀಕ್ಷೆಗೆಂದೆ ತಮ್ಮ ಒಂದು ತಿಂಗಳ ಅವಧಿಯನ್ನು ಮುಡುಪಾಗಿಟ್ಟಿರುತ್ತಾರೆ. ಅವರಿಗೆ ಸರಕಾರ ಒಂದು ಮನೆಗೆ 100 ರೂಪಾಯಿನಂತೆ ಹಣವನ್ನು ನೀಡುತ್ತದೆ. ಆದರೆ ಸರಕಾರಿ ನೌಕರರಾದ ಪ್ರಾಥಮಿಕ ಶಾಲಾ ಶಿಕ್ಷಕರನ್ನೇ ಸಮೀಕ್ಷೆಗೆ ಬಳಸಿಕೊಳ್ಳುವ ಉದ್ದೇಶದಿಂದ ಆದೇಶ ಹೊರಡಿಸಿದ್ದರಿಂದ ಸರಕಾರ ರಜಾ ಅವಧಿಯ ನೌಕರರನ್ನು ರಜಾವಧಿಯ ಸಮಯದಲ್ಲಿ ಬಳಸಿಕೊಂಡದ್ದಕ್ಕಾಗಿ ಗಳಿಕೆ ರಜೆ ಕೊಡುವ ಯೋಚನೆಯನ್ನೇ ಮಾಡುತ್ತಿಲ್ಲ ಎನ್ನುವುದು ಬಹುದೊಡ್ಡ ವಿಪರ್ಯಾಸವೇ ಸರಿ ಬಹುಶಃ ಕೊಡುವ ಸವಲತ್ತನ್ನೇ ಬಳಸಿಕೊಂಡು ಹಾಲೀ ಸರಕಾರ ಪಂಚ ಉಚಿತ ಸೌಲಭ್ಯ ಕೊಡುತ್ತಿದೆಯಾ ಎಂಬ ಅನುಮಾನ ಕಾಡುತ್ತಿದೆಯಂತೆ ಕೆಲವರಿಗೆ. ರಜಾ ಅವಧಿಯ ನೌಕರರಿಗೆ ಸದ್ಯ ವರ್ಷಕ್ಕೆ 10 ಗಳಿಕೆ ರಜೆ ಮಾತ್ರ ದೊರೆಯುತ್ತಿದೆ. ರಾಜಾ ಅವಧಿ ಅಲ್ಲದ ನೌಕರರಿಗೆ ವರ್ಷಕ್ಕೆ 30 ಗಳಿಕೆ ರಜೆ ಸಿಗುತ್ತದೆ. ಹಾಗಾಗಿ ರಜಾ ಅವಧಿಯಲ್ಲಿ ದುಡಿದ ಕಾರಣಕ್ಕೆ ಗಳಿಕೆ ರಜೆ ನೀಡುವುದು ಕಾನೂನು ಬದ್ದ, ಇದು ಬಿಟ್ಟಿ ಕೆಲಸವಲ್ಲ ಎಂಬುದನ್ನ ಗಮನಿಸಬೇಕು. ಕೊಡುವ ಸವಲತ್ತನ್ನೆಲ್ಲಾ ಕೊಟ್ಟು ಮಾಡಿ ಕೆಲಸ ಅಂದರೆ ನಾ ಮುಂದು ತಾ ಮುಂದು ಎಂದು ಸ್ಪರ್ಧಾತ್ಮಕವಾಗಿ ಕೆಲಸ ನಿರ್ವಹಿಸಲು ಸಿದ್ಧರಾಗುತ್ತಿದ್ದರು. ಇಲ್ಲಿ ಗಣತಿಯಲ್ಲಿ ಕಾರ್ಯ ವಹಿಸುತ್ತಿರುವ ಶಿಕ್ಷಕರು ತಮ್ಮನ್ನ ಬಲಿ-ಕಾ ಬಕ್ರಾ ಎಂದೇ ಭಾವಿಸಿ ದಿನಕ್ಕೊಂದು ಅಪ್ಡೇಟ್‌ ಅಂತ ೫ ದಿನದಲ್ಲಿ ಎಂಟು ಸಲ ಅಪ್ಡೇಟ್‌ ಆಗುತ್ತಿದ್ದ APPನ್ನು ಬಳಸಿ ದಿನ ದಿನವೂ ಕಲಿಯುತ್ತಲೇ, ಬರುವ ನೂರಾರು ಎರರ್‌ಗಳಿಗೆ ಉತ್ತರ ಹುಡುಕುತ್ತಲೇ ಚಿಂತೆಯಲ್ಲಿಯೇ ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ.

  ನಿಮಗಿದು ಗೊತ್ತೇ? ರಜಾವಧಿಯಲ್ಲದ ನೌಕರರಿಗೆ ವರ್ಷಕ್ಕೆ 30 ಗಳಿಕೆ ರಜೆಗಳು, ೨೪ ಎರಡನೇ ಮತ್ತು ನಾಲ್ಕನೇ ಶನಿವಾರದ ರಜೆಗಳು, ೨೦ ಅರ್ಧ ವೇತನ ರಜೆಗಳು ಮತ್ತು ೧೦ ಸಾಂದರ್ಭಿಕ ರಜೆಗಳನ್ನ ಅವರ ಖಾತೆಗೆ ಜಮಾ ಮಾಡಲಾಗುತ್ತದೆ. ಅದೇ ರೀತಿ ರಜಾವಧಿಯ ನೌಕರರಿಗೆ ವರ್ಷಕ್ಕೆ 10 ಗಳಿಕೆ ರಜೆಗಳು, 00 ಎರಡನೇ ಮತ್ತು ನಾಲ್ಕನೇ ಶನಿವಾರದ ರಜೆಗಳು 0೦ ಅರ್ಧ ದಿನ ವೇತನ ರಜೆಗಳು ಮತ್ತು ೧೫ ಸಾಂದರ್ಭಿಕ ರಜೆಗಳನ್ನ ಅವರ ಖಾತೆಗೆ ಜಮಾ ಮಾಡಲಾಗುತ್ತದೆ. ರಜಾವಧಿಯ ನೌಕರರಿಗೆ ಅಕ್ಟೋಬರ್‌ ತಿಂಗಳಲ್ಲಿ ಸಾಮಾನ್ಯವಾಗಿ ೧೨-೧೫ ರಜೆಗಳು, ಬೇಸಿಗೆಯಲ್ಲಿ ೩೬-೩೮ ರಜೆಗಳು ಲಭ್ಯವಾಗುತ್ತವೆ, ಆದರೆ ಅದೇ ರಜಾ ಅವಧಿಯಲ್ಲಿಯೇ ಚುನಾವಣೆ, ತರಬೇತಿಗಳು, ಬಿ.ಎಲ್.ಓ ಕಾರ್ಯ, ಗಣತಿ, ಸಮೀಕ್ಷೆ, ಸಾಕ್ಷರತೆ ಕಾರ್ಯ, ಮತ್ತು ಬೊಧನೆಯ ಅವಧಿಯಲ್ಲಿಯೇ ಬೋದನೆಯ ಜೊತೆಗೆ ಆನಲೈನ್ ಕಾರ್ಯಗಳು ಶಿಕ್ಷಕರ ಹೆಗಲ ಮೇಲೇರಿ ಬೆಂಬಿಡದ ಭೂತದಂತೆ ಕೂತಿರುತ್ತದೆ.

ಶಿಕ್ಷಕರಿಗೆ ಈಗಿರುವ ಅಸಹಾಯಕ ಪರಿಸ್ಥಿತಿಯನ್ನ ಅವಲೋಕಿಸುವ ಗೋಜಿಗೆ ಯಾವ ಮೇಲ್ಮಟ್ಟದ ಅಧಿಕಾರಿಗಳು ಮಾಡುತ್ತಿಲ್ಲ ಎನ್ನುವುದು ಸೋಜಿಗದ ವಿಷಯ, ವರದಿಸಬೇಕಾದ ಬಿ.ಇ.ಒ.ಗಳು ಡಿ.ಡಿ.ಗಳ ಹೆದರಿಕೆಗೆ, ಡಿ.ಡಿ.ಗಳು ಕಮಿಷನರ್‌ರ ಹೆದರಿಕೆಯಿಂದ ಹಾಲಿ ಶಾಲಾ ಶಿಕ್ಷಣದ ಪರಿಸ್ಥಿತಿಗಳ ಕುರಿತು ಹೇಳುವುದೇ ಇಲ್ಲ. ಎಲ್ಲರೂ ತಮ್ಮ ಕಾರ್ಯಭಾರವನ್ನ ತನ್ನ ಕೆಳಗಿನ ಅಧಿಕಾರಿಗೆ ಹೊರಿಸಲು ಕಾದಿರುತ್ತಾನೆ. ಇದು ಬೇಕಿತ್ತಾ ನಮಗೆ ಎಂದು ಅನಿಸುತ್ತದೆ.  ಇದರ ಹೊರತಾಗಿ ಮೇಲ್ಮಟ್ಟದ ಅಧಿಕಾರಿಗಳು ತನ್ನದೊಂದು ಇರಲಿ ಎಂದು ಮತ್ತೊಂದು ಆನ್‌ಲೈನ್‌ ಕಾರ್ಯವನ್ನ ಶಿಕ್ಷಕರ ಬೆನ್ನಿಗಂಟಿಸಿಯೇ ಹೋಗುತ್ತಿರುವುದು ಈಗ ವಾಡಿಕೆಯಾಗಿದೆ!!!. ಇದಕ್ಕೆ ಯಾರು ಹೊಣೆ? ಶಿಕ್ಷಕರ ಆನ್‌ಲೈನ್‌ ಕಾರ್ಯಭಾರದ ಹೊಣೆಯ ಕುರಿತು ಬರೆದರೆ ಒಂದು ಅನ್ವೇಷಣಾ ಗ್ರಂಥವೇ ಆಗುತ್ತದೆ. ಒಟ್ಟಿನಲ್ಲಿ ಕಾರ್ಯಭಾರ ದಿಂದ ಹೈರಾಣಾಗುವುದಂತು ನಿಜ. ಅಂತೂ ಅವನ ಸೇವಾವಧಿ ಮುಗಿಯುವುದರೊಳಗೆ ಏನಾಗಿರುತ್ತಾನೋ... ಊಹಿಸುವುದು ಕಷ್ಟವೇ...

ಮಕ್ಕಳ ಬೌದ್ಧಿಕ ಅಡಿಪಾಯಕ್ಕೆ ಭದ್ರ ತಳಪಾಯ ಪ್ರಾರ್ಥಮಿಕ ಶಿಕ್ಷಣ, ಇದನ್ನೆ ಸರಿಯಾಗಿ ಕೊಡದ ಈ ಸರ್ಕಾರಗಳ ನಿಜ ಉದ್ದೇಶ ಏನಿದೆ, ಅರ್ಥವಾಗದೇ ಇರದು. ಅಧಿಕಾರ ಕೊಡುವ ಮತದಾರನೆ ಮಣ್ಣು ತಿಂದರೆ, ಅಧಿಕಾರ ಹಿಡಿದವರು ಮತ್ತೆ ಅದನ್ನೇ ಅಲ್ಲವೇ ಕೊಡುವುದು?


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)

#buttons=(Ok, Go it!) #days=(20)

Our website uses cookies to enhance your experience. Check Now
Ok, Go it!